Wednesday, December 10, 2008

 

"ಭಜ ಗೋವಿಂದಂ" - ಒಂದು ಜಿಜ್ಞಾಸೆ

ಹಾ ಗುರುಗಳಾದ ಶ್ರೀ ಆದಿ ಶಂಕರಾಚಾರ್ಯರ "ಭಜ ಗೋವಿಂದಂ" ಶ್ಲೋಕಗಳನ್ನು , ಅಥವಾ ಕಡೇ ಪಕ್ಷ ಅವುಗಳ ಬಗ್ಗೆ ಕೇಳದವರು ಪ್ರಾಯಶಃ ಇರಲಿಕ್ಕಿಲ್ಲ. ಹತ್ತು - ಹನ್ನೆರಡು ವರ್ಷಗಳ ಹಿಂದೆ ಪ್ರಥಮ ಪಿ.ಯು.ಸಿ. ಸಂಸ್ಕೃತಪಠ್ಯದಲ್ಲಿ ಕೆಲವು ಶ್ಲೋಕಗಳಿದ್ದವು. ಅವುಗಳಲ್ಲಿ ಮೊದಲನೆ ಶ್ಲೋಕ ಇಂತಿದೆ,

ಭಜ ಗೋವಿಂದಂ ಭಜ ಗೋವಿಂದಂ, ಭಜ ಗೋವಿಂದಂ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನ ಹಿ ನ ಹಿ ರಕ್ಷತಿ ಡ್ ಖೃಙ್ಕರಣೇ ||

(ಎಲ್ಲರೂ ಹೇಳುವ ಪ್ರಕಾರ) ಇದರ ತಾತ್ಪರ್ಯವೇನೆಂದರೆ, "ಹೇ ಮಂದಬುದ್ಧಿಯವನೆ, ಕೃಷ್ಣನನ್ನು ಭಜಿಸು, ಕೃಷ್ಣನನ್ನು ಭಜಿಸು, ಕೃಷ್ಣನನ್ನು ಭಜಿಸು. ಮರಣಕಾಲ ಹತ್ತಿರ ಬಂದಾಗ ನಿನ್ನ ವ್ಯಾಕರಣ ಸೂತ್ರಗಳು ನಿನ್ನನ್ನು ಕಾಪಾಡಲಾರವು."

ಹೀಗೆ ಅರ್ಥ ಮಾಡಿಕೊಳ್ಳಲು ಬಲವಾದ ಕಾರಣವೂ ಇದೆ. ಅದೇನೆಂದರೆ, ಶ್ಲೋಕಗುಚ್ಛವು ಉದಯವಾಯಿಂತೆಂದು ನಂಬಲಾದ ಸಂದರ್ಭ.

ಶ್ರೀ ಶಂಕರರು ಕಾಶಿಯಲ್ಲಿ ಸ್ವಲ್ಪ ಕಾಲ ವಾಸವಿದ್ದರು. ಆಗ ಅವರು ಒಬ್ಬ ವೃದ್ಧರು ಪಾಣಿನಿ ಸೂತ್ರಗಳನ್ನು ಬಾಯಿಪಾಠ ಮಾಡುತ್ತಿದ್ದುದನ್ನು ಕಂಡರಂತೆ. ಅವರು ವಯಸ್ಸಿನಲ್ಲಿ ಅಧ್ಯಾತ್ಮದ ಬದಲಾಗಿ ಬುದ್ಧಿಯ ಮೇಲೆ ಶಕ್ತಿ ವ್ಯಯಿಸುವುದನ್ನು ಕಂಡು ಶಂಕರರಿಗೆ ಅಯ್ಯೋ ಅನ್ನಿಸಿತಂತೆ. ಅಂತೆಯೇ, ಬಹುಪಾಲು ಪ್ರಪಂಚವು ತನ್ನ ಸಮಯವನ್ನು ಇಂದ್ರಿಯ ಸುಖಗಳಲ್ಲೋ, ಅರ್ಥ ಸಂಪಾದನೆಯಲ್ಲೋ, ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳುವದರಲ್ಲೋ ಕಳೆಯುತ್ತದೆಂಬುದು ಅರಿವಾಗಿ, ಶ್ಲೋಕಗಳು ಅವರ ಮುಖದಿಂದ ಹೊರಬಿದ್ದುವಂತೆ.

ಕಥೆ ಕೇಳಲು ಚೆನ್ನಾಗಿದೆ, ಆದರೆ ನಿಜವೋ, ಸುಳ್ಳೋ ಎಂಬುದಕ್ಕೆ ಆಧಾರವಿಲ್ಲ. ಆದ್ದರಿಂದ ನಿಜವೆಂದೇ ಒಪ್ಪೋಣ. ಇಲ್ಲಿ ಜಿಜ್ಞಾಸೆ ಏನೆಂದರೆ, ನಿರಾಕಾರ ನಿರ್ಗುಣ ರೂಪಿಯ ಆರಾಧಕರೂ, ಬ್ರಹ್ಮ ತತ್ತ್ವದ ಪ್ರತಿಪಾದಕರೂ, ಅದ್ವೈತವನ್ನು ಮಾತ್ರವೇ ನಂಬಿದ ಶ್ರೀಮದಾಚಾರ್ಯರು "ಗೋವಿಂದ" ಎಂಬ ಮೂಲಕ ಸಗುಣರೂಪೀ ಶ್ರೀಕೃಷ್ಣನನ್ನು ಭಜಿಸಲು ಹೇಳಿದರೇ ಎಂಬುದು. ಸಾಮಾನ್ಯರಿಗೆ ಉಪಕಾರವಾಗಬೇಕೆಂಬ ಹಿನ್ನೆಲೆಯಲ್ಲಿ ಅವರು ದೇಶದ ನಾಲಕ್ಕು ಕಡೆ ಮಠಗಳನ್ನು ಸ್ಥಾಪಿಸಿದರು. ಯಾವತ್ತೂ ಅವರು ವಿಗ್ರಹಾರಾಧನೆ ತಪ್ಪು ಎಂದವರಲ್ಲ. ಎಲ್ಲರಿಗೂ ಅವರವರ ಮಟ್ಟಕ್ಕೆ ತಕ್ಕಂತೆ ಅಧ್ಯಾತ್ಮದ ದಾರಿಯಲ್ಲಿ ನಡೆಯುವುದಕ್ಕೆ ಮಾರ್ಗದರ್ಶನ ಮಾಡಿದವರು. ಅಂತಹವರು ಕಟ್ಟುನಿಟ್ಟಾಗಿ ಗೋವಿಂದನನ್ನು ಭಜಿಸು ಎಂಬುದಾಗಿ ಹೇಳಿದ್ದನ್ನು ನಂಬಲು ಕಷ್ಟವಾಗುತ್ತದೆ. ದೇವರು ಎಂಬ ಬದಲು, ಗೋವಿಂದ ಅರ್ಥಾತ್ ಕೃಷ್ಣನನ್ನು ಪೂಜಿಸಿದರೆ ಮಾತ್ರವೇ ಮುಕ್ತಿ ಎಂದು ಅಜ್ಞಾನಿಗಳಿಂದ ಅರ್ಥೈಸಲ್ಪಡುವ ಸಾಧ್ಯತೆ ಇತ್ತು. ಹೀಗಾಗಿ, ಜ್ಞಾನಿಗಳಾದ ಆಚಾರ್ಯರು ಅಂತಹ ಗೊಂದಲವನ್ನು ಸೃಷ್ಟಿಸಿಯಾರೇ? ಅಲ್ಲದೆ ಅವರ ಜೀವನದೊಂದಿಗೆ ಶಿವನ ಅನುಗ್ರಹವು ತುಂಬಾ ರೀತಿಯಲ್ಲಿ ಮಿಳಿತವಾಗಿದೆ. ಸಂನ್ಯಾಸಪ್ರಧಾನವಾಗಿರುವ ಶ್ಲೋಕಮಾಲೆಯಲ್ಲಿ ಜನಮಾನಸದಲ್ಲಿ ರಾಸಲೀಲೆಗೆ ಇನ್ನೊಂದು ಹೆಸರಾದ ಶ್ರೀಕೃಷ್ಣನ ಬದಲು ವೈರಾಗ್ಯದ ಮೂರ್ತರೂಪವಾದ ಶಿವನ ಹೆಸರನ್ನೇ ಬಳಸಬಹುದಿತ್ತಲ್ಲವೇ? ಸ್ವತಃ ಸರಸ್ವತಿದೇವಿಯೇ ಜಿಹ್ವೆಯಲ್ಲಿ ನರ್ತಿಸುತ್ತಿದ್ದಾಗ ಅದೇನೂ ಅವರಿಗೆ ಅಸಾಧ್ಯವಾಗಿರಲಿಲ್ಲ. ಹಾಗಿದ್ದರೂ ಏಕೆ "ಗೋವಿಂದ"?

ಇದಕ್ಕೆ ಮುನ್ನ ೩೧ ಶ್ಲೋಕಮಾಲೆಯ ಕೊನೆಯ ಶ್ಲೋಕವನ್ನು ಓದೋಣ.

ಗುರುಚರಣಾಂಬುಜ ನಿರ್ಭರ ಭಕ್ತಾಃ ಸಂಸಾರಾದಿಚಿರಾದ್ಭವ ಮುಕ್ತಾ- |
-ಸ್ಸೇಂದ್ರಿಯಮಾನಸನಿಯಮಾದೇವಂ ದ್ರಕ್ಹ್ಯಸಿ ನಿಜ ಹೃದಯಸ್ಥಂ ದೇವಂ ||

"ಗುರುವಿನ ಕಮಲಚರಣ ಭಕ್ತನೇ, ನೀನು ಬೇಗನೆ ಸಂಸಾರದಿಂದ ಮುಕ್ತನಾಗು. ಇಂದ್ರಿಯನಿಗ್ರಹ ಹಾಗೂ ಮನಸ್ಸಿನ ಹತೋಟಿಯ ಮೂಲಕ ನಿನ್ನ ಹೃದಯದಲ್ಲಿರುವ ನಿಜವಾದ ದೇವರನ್ನು ನೋಡುವೆ." - ಇಂತಿದೆ ಇದರ ಭಾವಾರ್ಥ.

ಈಗ ಸ್ವಲ್ಪ ನೆನಪಿಸಿಕೊಳ್ಳೋಣ; ಶ್ರೀ ಶಂಕರರ ಗುರುಗಳ ಹೆಸರೇನು? ಶ್ರೀ ಗೋವಿಂದ ಭಗವತ್ಪಾದರೆಂದು. ಪ್ರಥಮಶ್ಲೋಕದಲ್ಲಿ ಅವರು ತಮ್ಮ ಗುರುಗಳನ್ನು ಭಜಿಸುವಂತೆ ಸೂಚಿಸಿದ್ದಾರೆಂದು ಏಕೆ ಅರ್ಥ ಮಾಡಿಕೊಳ್ಳಬಾರದು? ಅದನ್ನು ಪುಷ್ಟೀಕರಿಸುವಂತೆ ಕೊನೆಯ ಶ್ಲೋಕದಲ್ಲಿ, "ಸಂಸಾರದ(ಜಗತ್ತಿನ) ನಶ್ವರತೆಯನ್ನು ತಿಳಿದು ಗುರುವಿನ ಚರಣ(ಪಾದ)ವನ್ನು ಭಕ್ತಿಯಿಂದ ಆಶ್ರಯಿಸಿ ಶಾಶ್ವತವಾದ ಆನಂದವನ್ನು (ಬ್ರಹ್ಮ, ದೇವರು) ತನ್ನೊಳಗಿನಿಂದಲೇ ಪಡೆಯಬಹುದು" ಎಂಬ ಅರ್ಥ ಬರುವುದಲ್ಲವೇ? ಅದಲ್ಲದೆ ಮೊದಲ ಶ್ಲೋಕ ಹೊರತುಪಡಿಸಿ ಕೃಷ್ಣನ ಹೆಸರು(ಮುರಾರಿ) ಬರುವುದು ೨೧ನೆಯ ಶ್ಲೋಕದಲ್ಲಿ ಮಾತ್ರ, ಅದೂ ಪ್ರಾಸಬದ್ಧವಾಗಿರುವದರಿಂದ, ಆಧಾರದ ಮೇಲೆ ಮೊದಲ ಶ್ಲೋಕದ ಬಗ್ಗೆ ಯಾವ ರೀತಿಯ ತೀರ್ಮಾನವನ್ನೂ ಮಾಡಲಾಗುವುದಿಲ್ಲ.ಅಲ್ಲದೆ ಆ ಶ್ಲೋಕವನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ, ಕೃಷ್ಣನ ಹೆಸರು ಸಂದರ್ಭೋಚಿತವಾಗಿ ಲೋಕಪಾಲನೆಂಬ ಅರ್ಥದಲ್ಲಿ ಬಂದಿದೆಯೆಂದು, ಅಂದರೆ, ಅಪಾರವಾದ ಸಂಸಾರ ಸಾಗರವನ್ನು ಈಜಲು ಅವನ ಸಹಾಯ ಬೇಕು ಎಂದು. ಆದರೆ ಅವರ ಸಿದ್ಧಾಂತವೇನಿದ್ದರೂ ಬ್ರಹ್ಮತ್ವ. ಮಿಕ್ಕೆಲ್ಲಾ ಶ್ಲೋಕಗಳಲ್ಲೂ "ಬ್ರಹ್ಮ" ಶಬ್ದವು ಧಾರಾಳವಾಗಿ ಕಂಡುಬರುತ್ತದೆ ಮತ್ತು ಇದರಿಂದ ಅವರು ತಮ್ಮ ಸಿದ್ಧಾಂತವನ್ನು ಸಾಮಾನ್ಯರಿಗೆ ಸರಳ ಸಂಸ್ಕೃತದಲ್ಲಿ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದೆನಿಸುತ್ತದೆ. ಧ್ಯಾನದಲ್ಲಿ ಒಂದು ಮಟ್ಟವನ್ನು ತಲುಪುವವರೆಗೆ ಗುರುವಿನ ಮೇಲೆ ಅವಲಂಬಿತರಾಗಿರುವುದೂ ಅದರ ಒಂದು ಭಾಗ. ಆದ್ದರಿಂದಲೇ ಅವರು, " ಎಲ್ಲ ಪ್ರಾಪಂಚಿಕ ವಿಷಯಗಳನ್ನು ತ್ಯಜಿಸಿ, ಒಬ್ಬ ಯೋಗ್ಯ ಗುರುವನ್ನು ಹುಡುಕಿ ಬ್ರಹ್ಮನನ್ನು ಹೊಂದುವ ದಾರಿಯಲ್ಲಿ ಸಾಗು" ಎಂದು ಉಪದೇಶಿಸಿದ್ದಾರೆಯೋ ಎಂದೆನಿಸುತ್ತದೆ. ಸಾಮಾನ್ಯಜನರಿಗೆ ಗುರುವಿನ ಹೊರತಾಗಿ ಅಧ್ಯಾತ್ಮದೆಡೆಗೆ ಸಾಗುವುದು ತುಂಬಾ ಕಷ್ಟ. ತಮ್ಮ ಗುರುಗಳ ಮೇಲಿನ ಗೌರವದಿಂದ ಅವರು "ಗುರು" ಎಂಬರ್ಥದಲ್ಲಿ "ಗೋವಿಂದ" ಎಂಬುದನ್ನು ಬಳಸಿರಬಹುದಲ್ಲವೇ?

ಇದೀಗ ಕಾಶಿಯ ವೃದ್ಧರ ಕಥೆ ಸುಳ್ಳಾಗಿದ್ದರೆ ಎಂಬ ವಿಷಯಕ್ಕೆ ಬಂದರೆ, ಅಲ್ಲೂ ಇದೇ ವಾದವನ್ನು ಮಂಡಿಸಬಹುದು. ಶ್ಲೋಕಾವಳಿಯನ್ನವರು ತಮ್ಮ ಸಹಪಾಠಿಗಳಿಗಾಗಿ ರಚಿಸಿರಬಹುದು. ಮಾಧವೀಯ ಶಂಕರವಿಜಯದಲ್ಲಿರುವ ಪ್ರಕಾರ, ಅವರು ಉಳಿದವರಿಗಿಂತ ತುಂಬಾ ಮುಂದಿದ್ದರು ಕಲಿಯುವಿಕೆಯಲ್ಲಿ, ಜ್ಞಾನದಲ್ಲಿ. ಆದ್ದರಿಂದ ಸ್ವಾಭಾವಿಕವಾಗಿಯೇ ಸಹಪಾಠಿಗಳಿಗೆ ತಿಳಿಹೇಳುವಷ್ಟು ವರ್ಚಸ್ಸನ್ನು ಬೆಳೆಸಿಕೊಂಡಿರಬಾರದೇಕೆ? ಈಗ "ಗೋವಿಂದ" = "ಗುರು" ಎಂಬುದು ಇನ್ನೂ ಹೆಚ್ಚು ಅರ್ಥಪೂರ್ಣವೆನಿಸುತ್ತದೆಯಲ್ಲವೇ?

ಕೊನೆಯದಾಗಿ ಹೇಳಬಯಸುವುದೇನೆಂದರೆ, ಇಂತಹ ಪ್ರಶ್ನೆಗಳು "ಭಜ ಗೋವಿಂದಂ"ನಲ್ಲಷ್ಟೇ ಅಲ್ಲ, ಇನ್ನೂ ಎಷ್ಟೋ (ಸಂಸ್ಕೃತ) ಕೃತಿಗಳನ್ನೋದಿದಾಗಲೂ ಏಳಬಹುದು. ಆಗೆಲ್ಲ ಹಳೆಯ ಟಿಪ್ಪಣಿಗಳಿಗೆ ಮೊರೆಯಿಡುವುದು ಸಾಧುವೆನಿಸದು. ಪರಂಪರಾನುಗತವಾಗಿ ಬಂದಿರುವ ಟಿಪ್ಪಣಿಗಳು ಸತ್ಯವಾಗಿರಲೇಬೇಕೆಂದೇನಿಲ್ಲ. ಆದರೆ ಅವು ಸುಳ್ಳೆಂತಲೂ ಹೇಳುವುದಕ್ಕೆ ಆಧಾರಗಳಿರುವುದಿಲ್ಲ. ಇಂತಿರುವಾಗ, ಶ್ರೀಮಂತವಾದ ಗೀರ್ವಾಣವಾಣಿಯಲ್ಲಿ ವಿರಚಿತವಾದ ಕೃತಿಗಳನ್ನು ಭಾಷೆ ತಕ್ಕಮಟ್ಟಿಗೆ ಗೊತ್ತಿದ್ದರೂ ಸಾಕು, ಮೂಲರೂಪದಲ್ಲಿ ಓದೋಣ; ಅಷ್ಟೇ ಅಲ್ಲ ಆಳವಾಗಿ ಯೋಚಿಸಿ ನಾವೇ ಆರ್ಥ ಹುಡುಕೋಣ. ದ್ವಂದ್ವಾರ್ಥ ಕೊಡುವ ವಿಷಯಗಳನ್ನು ಪ್ರಶ್ನಾರೂಪದಲ್ಲಿ ಪಂಡಿತರ ಮುಂದಿಡೋಣ. ಇದರಿಂದ ಸಾಹಿತ್ಯ, ಇತಿಹಾಸ ಹಾಗೂ ಭಾಷಾಜ್ಞಾನಗಳು ನಿಂತ ನೀರಿನಂತಾಗುವುದನ್ನು ತಪ್ಪಿಸಬಹುದಲ್ಲವೇ?

Comments:
ಖಂಡಿತ ಖಂಡಿತ. ತುಂಬಾ ಚನಾಗಿದೆ :)
 
Hello Aparna,

I guess the story is that a young boy was studying the panini sutra "dukryin karane"

For the second one.. i remember one of the dasara pada..

"pari pari aneka shastravanodi doreyadanna mukuthi.. guruvina gulamanaguva tanaka doreyadanna mukuthi"
 
Post a Comment

Subscribe to Post Comments [Atom]





<< Home

This page is powered by Blogger. Isn't yours?

Subscribe to Posts [Atom]